4 ಯೇಸು ಅದನ್ನು ಕೇಳಿ, “ಈ ಕಾಯಿಲೆಯು ಮರಣಕ್ಕಾಗಿಯಲ್ಲ. ದೇವರ ಮಹಿಮೆಗಾಗಿಯೇ ಬಂದದ್ದು. ಇದರಿಂದ ದೇವರ ಪುತ್ರನಿಗೆ ಮಹಿಮೆಯಾಗುವುದು,” ಎಂದು ಹೇಳಿದರು. 5 ಮಾರ್ಥಳನ್ನು ಅವಳ ಸಹೋದರಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದರು. 6 ಅವನು ಅಸ್ವಸ್ಥನಾಗಿದ್ದಾನೆಂದು ಯೇಸು ಕೇಳಿದ ಮೇಲೆಯೂ ಎರಡು ದಿವಸ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡರು. 7 ತರುವಾಯ ಯೇಸು ತಮ್ಮ ಶಿಷ್ಯರಿಗೆ, “ನಾವು ತಿರುಗಿ ಯೂದಾಯಕ್ಕೆ ಹೋಗೋಣ,” ಎಂದರು.
8 ಯೇಸುವಿನ ಶಿಷ್ಯರು ಅವರಿಗೆ, “ಬೋಧಕರೇ, ಈಗ ಯೆಹೂದ್ಯರು ನಿಮ್ಮ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ. ತಿರುಗಿ ನೀವು ಅಲ್ಲಿಗೆ ಹೋಗಬೇಕೆಂದಿರುವಿರಾ?” ಎಂದರು.
9 ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾರಾದರೂ ಹಗಲಿನಲ್ಲಿ ನಡೆದರೆ ಎಡವುದಿಲ್ಲ ಏಕೆಂದರೆ ಈ ಲೋಕದ ಬೆಳಕು ಅವರಿಗೆ ಕಾಣಿಸುತ್ತದೆ. 10 ಯಾರಾದರೂ ರಾತ್ರಿಯಲ್ಲಿ ನಡೆದರೆ ತಮ್ಮಲ್ಲಿ ಬೆಳಕಿಲ್ಲದಿರುವುದರಿಂದ ಅವರು ಎಡವುತ್ತಾರೆ,” ಎಂದು ಉತ್ತರಕೊಟ್ಟರು.
11 ಇದನ್ನು ಹೇಳಿದ ತರುವಾಯ ಯೇಸು ಅವರಿಗೆ, “ನಮ್ಮ ಸ್ನೇಹಿತ ಲಾಜರನು ನಿದ್ರೆ ಮಾಡುತ್ತಿದ್ದಾನೆ. ಆದರೆ ನಾನು ಹೋಗಿ ಅವನನ್ನು ಎಬ್ಬಿಸಬೇಕು,” ಎಂದರು.
12 ಯೇಸುವಿನ ಶಿಷ್ಯರು, “ಸ್ವಾಮೀ, ಅವನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು,” ಎಂದರು. 13 ಯೇಸು ಅವನ ಮರಣವನ್ನು ಕುರಿತು ಹೇಳಿದ್ದರು. ಆದರೆ ಶಿಷ್ಯರು ನಿದ್ರೆಯ ವಿಶ್ರಾಂತಿಯನ್ನು ಕುರಿತು ಯೇಸು ಹೇಳಿದರೆಂದು ಯೋಚಿಸಿದರು.
14 ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತುಹೋಗಿದ್ದಾನೆ. 15 ಆದರೆ ನಾನು ಅಲ್ಲಿ ಇಲ್ಲದೆ ಹೋದದ್ದು ನಿಮ್ಮ ನಿಮಿತ್ತವಾಗಿ ಸಂತೋಷಪಡುತ್ತೇನೆ, ಯಾಕೆಂದರೆ ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಆದರೆ ಅವನ ಬಳಿಗೆ ಹೋಗೋಣ,” ಎಂದು ಹೇಳಿದರು.
16 ದಿದುಮನೆಂಬ ತೋಮನು[a] ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಗುರುವಿನೊಂದಿಗೆ ಸಾಯುವುದಕ್ಕೆ ಹೋಗೋಣ,” ಎಂದನು.
21 ಆಗ ಮಾರ್ಥಳು ಯೇಸುವಿಗೆ, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ. 22 ಆದರೆ ಈಗಲೂ ನೀವು ದೇವರನ್ನು ಏನು ಕೇಳಿಕೊಂಡರೂ ದೇವರು ಅದನ್ನು ನಿಮಗೆ ಕೊಡುವರೆಂದು ನಾನು ಬಲ್ಲೆನು,” ಎಂದಳು.
23 ಯೇಸು ಆಕೆಗೆ, “ನಿನ್ನ ಸಹೋದರನು ಪುನಃ ಜೀವಂತನಾಗಿ ಎದ್ದೇಳುವನು,” ಎಂದು ಹೇಳಿದರು.
24 ಮಾರ್ಥಳು ಯೇಸುವಿಗೆ, “ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನು ಪುನಃ ಎದ್ದು ಬರುವನೆಂದು ನಾನು ಬಲ್ಲೆನು,” ಎಂದು ಹೇಳಿದಳು.
25 ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವರು ಸತ್ತರೂ ಬದುಕುವರು. 26 ಜೀವಿಸುವ ಪ್ರತಿಯೊಬ್ಬರೂ ನನ್ನಲ್ಲಿ ನಂಬಿಕೆಯಿಟ್ಟರೆ, ಅವರು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯಾ?” ಎಂದು ಕೇಳಿದ್ದಕ್ಕೆ,
27 ಆಕೆಯು ಯೇಸುವಿಗೆ, “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾಗಿದ್ದ ದೇವರ ಪುತ್ರನಾದ ಕ್ರಿಸ್ತನು ನೀವೇ ಎಂದು ನಾನು ನಂಬಿದ್ದೇನೆ,” ಎಂದಳು.
28 ಇದನ್ನು ಹೇಳಿ ಆಕೆಯು ಹೊರಟುಹೋಗಿ ತನ್ನ ಸಹೋದರಿ ಮರಿಯಳನ್ನು ರಹಸ್ಯವಾಗಿ ಕರೆದು, “ಬೋಧಕರು ಇಲ್ಲಿದ್ದಾರೆ, ನಿನ್ನನ್ನು ಕರೆಯುತ್ತಾರೆ,” ಎಂದಳು. 29 ಆಕೆಯು ಇದನ್ನು ಕೇಳಿದಾಗ ತಟ್ಟನೆ ಎದ್ದು ಯೇಸುವಿನ ಬಳಿಗೆ ಹೋದಳು. 30 ಯೇಸು ಇನ್ನೂ ಊರೊಳಕ್ಕೆ ಬಾರದೆ ಮಾರ್ಥಳು ಅವರನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದರು. 31 ಮರಿಯಳೊಂದಿಗೆ ಮನೆಯಲ್ಲಿ ಆಕೆಯ ಜೊತೆಗಿದ್ದು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುತ್ತಿರುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಯ ಬಳಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯನ್ನು ಹಿಂಬಾಲಿಸಿದರು.
32 ಯೇಸು ಇದ್ದ ಸ್ಥಳಕ್ಕೆ ಮರಿಯಳೂ ಬಂದು ಅವರನ್ನು ಕಂಡು ಅವರ ಪಾದಗಳಿಗೆ ಬಿದ್ದು, “ಸ್ವಾಮೀ, ನೀವು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ,” ಎಂದು ಹೇಳಿದಳು.
33 ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಅಳುವುದನ್ನು ಯೇಸು ಕಂಡಾಗ ಆತ್ಮದಲ್ಲಿ ನೊಂದುಕೊಂಡು ಕಳವಳಗೊಂಡವರಾಗಿ, 34 “ಅವನನ್ನು ಎಲ್ಲಿ ಸಮಾಧಿಮಾಡಿದ್ದೀರಿ?” ಎಂದು ಕೇಳಿದರು.
35 ಯೇಸು ಕಣ್ಣೀರಿಟ್ಟರು.
36 ಆಗ ಯೆಹೂದ್ಯರು, “ನೋಡಿರಿ, ಈತನಿಗೆ ಲಾಜರನ ಮೇಲೆ ಎಷ್ಟು ಪ್ರೀತಿ,” ಎಂದರು.
37 ಅವರಲ್ಲಿ ಕೆಲವರು, “ಆ ಕುರುಡನ ಕಣ್ಣುಗಳನ್ನು ತೆರೆದ ಈತನು ಲಾಜರನನ್ನೂ ಸಾಯದಂತೆ ಮಾಡಬಾರದಿತ್ತೆ?” ಎಂದರು.
40 ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವೆ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದರು.
41 ಆಗ ಕೆಲವರು ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣೆತ್ತಿ ಮೇಲೆ ನೋಡಿ, “ತಂದೆಯೇ, ನೀವು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 42 ನೀವು ನನಗೆ ಯಾವಾಗಲೂ ಕಿವಿಗೊಡುತ್ತೀರಿ ಎಂದು ನಾನು ಬಲ್ಲೆನು. ಆದರೆ ನನ್ನ ಸುತ್ತಲೂ ನಿಂತಿರುವ ಈ ಜನರು, ನೀವೇ ನನ್ನನ್ನು ಕಳುಹಿಸಿದ್ದೀರಿ ಎಂದು ನಂಬುವಂತೆ ನಾನು ಇದನ್ನು ಹೇಳಿದೆನು,” ಎಂದರು.
43 ಯೇಸು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ,” ಎಂದು ಗಟ್ಟಿಯಾದ ಸ್ವರದಿಂದ ಕೂಗಿದರು. 44 ಆಗ ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವವಸ್ತ್ರದಿಂದ ಕಟ್ಟಿದ್ದವು, ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು.
49 ಅವರಲ್ಲಿ ಆ ವರ್ಷದ ಮಹಾಯಾಜಕನಾದ ಕಾಯಫನೆಂಬವನು ಅವರಿಗೆ, “ನಿಮಗೆ ಏನೂ ತಿಳಿಯುವುದಿಲ್ಲ. 50 ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಎಣಿಸುವುದೇ ಇಲ್ಲ,” ಎಂದನು.
51 ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಅವನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ ಯೇಸು ಆ ರಾಷ್ಟ್ರಕ್ಕಾಗಿ ಮಾತ್ರವಲ್ಲದೆ 52 ಚದುರಿರುವ ದೇವರ ಮಕ್ಕಳನ್ನು ಒಂದಾಗಿ ಕೂಡಿಸುವುದಕ್ಕಾಗಿಯೂ ಯೇಸು ಸಾಯಬೇಕಾಗಿದೆ ಎಂದು ಅವನು ಪ್ರವಾದಿಸಿದನು. 53 ಅವರು ಆ ದಿನದಿಂದ ಯೇಸುವನ್ನು ಕೊಲ್ಲಬೇಕೆಂಬ ಒಳಸಂಚು ಮಾಡಿಕೊಂಡರು.
54 ಹೀಗಿರುವುದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅವರು ಅಲ್ಲಿಂದ ಅರಣ್ಯಕ್ಕೆ ಸಮೀಪದಲ್ಲಿದ್ದ ಎಫ್ರಾಯೀಮ್ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಶಿಷ್ಯರ ಸಂಗಡ ವಾಸಮಾಡಿದರು.
55 ಆಗ ಯೆಹೂದ್ಯರ ಪಸ್ಕಹಬ್ಬವು ಹತ್ತಿರವಾಗಿತ್ತು. ಅನೇಕರು ತಮ್ಮನ್ನು ಶುದ್ಧಿ ಮಾಡಿಕೊಳ್ಳುವುದಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೋದರು. 56 ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಆತನು ಹಬ್ಬಕ್ಕೆ ಬರುತ್ತಾನೋ ಇಲ್ಲವೋ? ನಿಮಗೆ ಹೇಗೆ ಕಾಣುತ್ತದೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 57 ಆಗ ಮುಖ್ಯಯಾಜಕರೂ ಫರಿಸಾಯರೂ ಯೇಸುವನ್ನು ಬಂಧಿಸುವಂತೆ ಆತನ ಸುಳಿವು ಯಾರಿಗಾದರೂ ತಿಳಿದಿದ್ದರೆ ಅವರು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.
<- ಯೋಹಾನ 10ಯೋಹಾನ 12 ->- a ಅರಾಮಿಕ್ ಭಾಷೆಯಲ್ಲಿ ತೋಮನು ಮತ್ತು ಗ್ರೀಕ್ ಭಾಷೆಯಲ್ಲಿ ದಿದುಮ ಇವುಗಳ ಅರ್ಥ ಅವಳಿ