1 ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತನ್ನ ಶಿಷ್ಯರಿಗೆ, “ಎರಡು ದಿನಗಳಾದ ಮೇಲೆ ಪಸ್ಕಹಬ್ಬ ಬರುತ್ತದೆಂದು ನೀವು ಬಲ್ಲಿರಿ; 2 ಆಗ ಮನುಷ್ಯಕುಮಾರನನ್ನು ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿ ಕೊಡಲಾಗುವುದು” ಎಂದು ಹೇಳಿದನು.
3 ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು 4 ಯೇಸುವನ್ನು ಗುಟ್ಟಾಗಿ ಹಿಡಿದು ಕೊಲ್ಲಬೇಕೆಂಬುದಾಗಿ ಒಳಸಂಚು ಮಾಡಿದರು. 5 “ಆದರೂ ಹಬ್ಬದಲ್ಲಿ[a] ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು” ಎಂದು ಮಾತನಾಡಿಕೊಂಡರು.
17 ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪಸ್ಕದ ಊಟಮಾಡುವುದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕನ್ನುತ್ತೀ” ಎಂದು ಕೇಳಿದರು. 18 ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು. 19 ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆಯೇ ಮಾಡಿ ಪಸ್ಕದ ಭೋಜನವನ್ನು ತಯಾರಿಸಿದರು.
20 ಸಂಜೆಯಾದಾಗ ಆತನು ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತುಕೊಂಡನು. 21 ಅವರು ಊಟಮಾಡುತ್ತಿರುವಾಗ ಆತನು, “ನಿಮಗೆ ಸತ್ಯವಾಗಿ ಹೇಳುತ್ತೇನೆ ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು” ಅಂದನು. 22 ಆಗ ಅವರು ಬಹಳ ದುಃಖಪಟ್ಟು, “ಕರ್ತನೇ, ನಾನಲ್ಲವಲ್ಲಾ?” ಎಂದು ಪ್ರತಿಯೊಬ್ಬರು ಕೇಳತೊಡಗಿದರು. 23 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಬಟ್ಟಲಲ್ಲಿ ನನ್ನ ಸಂಗಡ ಕೈ ಅದ್ದಿದವನೇ ನನ್ನನ್ನು ಹಿಡಿದುಕೊಡುವವನು. 24 ಮನುಷ್ಯಕುಮಾರನು ಆತನ ವಿಷಯವಾಗಿ ಬರೆದಿರುವ ಹಾಗೆ ಹೊರಟುಹೋಗುತ್ತಾನೆ; ಆದರೆ ಯಾವನು ಮನುಷ್ಯಕುಮಾರನನ್ನು ಹಿಡಿದುಕೊಡುವನೋ ಅವನ ಗತಿಯನ್ನು ಏನೆಂದು ಹೇಳಲಿ. ಆ ಮನುಷ್ಯನು ಹುಟ್ಟದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು” ಅಂದನು. 25 ಆಗ ಆತನನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ನಾನೋ?” ಎಂದು ಕೇಳಲು ಯೇಸು ಅವನಿಗೆ, “ನೀನೇ ಹಾಗೆ ಹೇಳಿದ್ದೀ” ಎಂದು ಹೇಳಿದನು. 26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು. 27 ಆ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಸಲ್ಲಿಸಿ ಅವರಿಗೆ ಕೊಟ್ಟು, “ಇದರಲ್ಲಿರುವುದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, 28 ಇದು ಬಹು ಜನರ ಪಾಪಗಳ ಕ್ಷಮಾಪಣೆಗಾಗಿ ಸುರಿಸಲ್ಪಡುವ ಹೊಸ [c]ಒಡಂಬಡಿಕೆಯ ರಕ್ತ. 29 ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಸಂಗಡ ಹೊಸದಾಗಿ ದ್ರಾಕ್ಷಾರಸವನ್ನು ಕುಡಿಯುವ ದಿನದವರೆಗೂ ಇನ್ನು ಇದನ್ನು ಕುಡಿಯುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಅಂದನು. 30 ಬಳಿಕ ಅವರು ಕೀರ್ತನೆಯನ್ನು ಹಾಡಿದ ಮೇಲೆ ಎಣ್ಣೆಯ ಮರಗಳ ಗುಡ್ಡಕ್ಕೆ ಹೊರಟು ಹೋದರು.
31 ಆಗ ಯೇಸು, ಅವರಿಗೆ, [d]“ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ಹಿಂಜರಿಯುವಿರಿ.” 32 “ಆದರೆ ನಾನು ಜೀವಿತನಾಗಿ ಎದ್ದ ಮೇಲೆ[e]ನಿಮಗಿಂತ ಮೊದಲೇ ಗಲಿಲಾಯಕ್ಕೆ ಹೋಗುವೆನು” ಎಂದು ಹೇಳಿದನು. 33 ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು. 34 ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು. 35 ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.
36 ಅನಂತರ ಯೇಸು ತನ್ನ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ತೋಟಕ್ಕೆ ಬಂದು ಅವರಿಗೆ, “ಇಲ್ಲೇ ಕುಳಿತುಕೊಳ್ಳಿರಿ, ನಾನು ಅತ್ತ ಹೋಗಿ ಪ್ರಾರ್ಥಿಸುತ್ತೇನೆ” ಎಂದು ಹೇಳಿ, 37 ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಮಕ್ಕಳನ್ನು ಕರೆದುಕೊಂಡು ಮುಂದಕ್ಕೆ ಹೋಗಿ ದುಃಖಪಟ್ಟು ಮನಗುಂದಿದವನಾದನು. 38 ಮತ್ತು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ; ನೀವು ಇಲ್ಲೇ ಇದ್ದು ನನ್ನ ಸಂಗಡ ಎಚ್ಚರವಾಗಿರಿ” ಎಂದು ಹೇಳಿದನು. 39 ಆತನು ಸ್ವಲ್ಪ ಮುಂದೆ ಹೋಗಿ ಬೋರಲು ಬಿದ್ದು, [f]“ನನ್ನ ತಂದೆಯೇ, ಸಾಧ್ಯವಾದರೆ ಈ[g]ಪಾನಪಾತ್ರೆಯು ನನ್ನನ್ನು ಬಿಟ್ಟುಹೋಗಲಿ; ಆದರೂ ನನ್ನ ಚಿತ್ತದಂತಾಗದೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 40 ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ? 41 [h]ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಆತ್ಮವು ಸಿದ್ಧವಾಗಿದೆ ಆದರೆ ದೇಹವು ಬಲಹೀನವಾಗಿದೆ” ಎಂದು ಹೇಳಿದನು. 42 ತಿರುಗಿ ಎರಡನೇ ಸಾರಿ ಹೋಗಿ, “ನನ್ನ ತಂದೆಯೇ, ನಾನು ಕುಡಿಯದ ಹೊರತು ಈ ಪಾತ್ರೆ ಬಿಟ್ಟುಹೋಗಲಾರದು ಎಂದಿದ್ದರೆ ನಿನ್ನ ಚಿತ್ತದಂತೆಯೇ ಆಗಲಿ” ಎಂದು ದೇವರನ್ನು ಪ್ರಾರ್ಥಿಸಿದನು. 43 ಆತನು ತಿರುಗಿ ಬಂದಾಗಲೂ ಅವರು ನಿದ್ದೆಮಾಡುವುದನ್ನು ಕಂಡನು; ಅವರ ಕಣ್ಣುಗಳು ಭಾರವಾಗಿದ್ದವು. 44 ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು. 45 ತರುವಾಯ ಆತನು ಶಿಷ್ಯರ ಬಳಿಗೆ ಬಂದು ಅವರಿಗೆ, “ನೀವು ಇನ್ನು ನಿದ್ದೆ ಮಾಡಿ ವಿಶ್ರಮಿಸಿಕೊಳ್ಳುತ್ತಿದ್ದೀರೋ; ಇಗೋ, ಅ ಗಳಿಗೆ ಸಮೀಪಿಸಿತು, ಈಗ ಮನುಷ್ಯಕುಮಾರನು ಪಾಪಿಷ್ಠರ ಕೈಗೆ ಒಪ್ಪಿಸಲ್ಪಡುತ್ತಾನೆ. 46 ಏಳಿರಿ, ಹೋಗೋಣ; ನನ್ನನ್ನು ಹಿಡಿದುಕೊಡುವವನು ಹತ್ತಿರಕ್ಕೆ ಬಂದಿದ್ದಾನೆ ನೋಡಿರಿ” ಎಂದು ಹೇಳಿದನು.
57 ಯೇಸುವನ್ನು ಹಿಡಿದವರು ಆತನನ್ನು ಮಹಾಯಾಜಕನಾದ ಕಾಯಫನ ಬಳಿಗೆ ಕರೆದುಕೊಂಡು ಹೋದರು, ಅಲ್ಲಿ ಶಾಸ್ತ್ರಿಗಳೂ ಹಿರಿಯರೂ ಒಟ್ಟಾಗಿ ಸೇರಿಬಂದಿದ್ದರು. 58 ಆದರೆ ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ, ಮಹಾಯಾಜಕನ ಭವನದ ಅಂಗಳದ ಒಳಗೆ ನುಗ್ಗಿ ಬಂದು ಆತನಿಗೆ ಏನಾಗುವುದೋ ಎಂದು ನೋಡಬೇಕೆಂದು ಸೈನಿಕರ ಸಂಗಡ ಕುಳಿತುಕೊಂಡನು. 59 ಆಗ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಆತನ ಮೇಲೆ ಸುಳ್ಳುಸಾಕ್ಷಿಯನ್ನು ಹುಡುಕಿದರು; ಆದರೆ ಬಹು ಮಂದಿ ಸುಳ್ಳುಸಾಕ್ಷಿಗಳು ಮುಂದೆ ಬಂದರೂ ಏನೂ ಸಿಕ್ಕಲಿಲ್ಲ. 60 ಅನಂತರ ಇಬ್ಬರು ಮುಂದೆ ಬಂದು, 61 “ನಾನು ದೇವರ ಆಲಯವನ್ನು ಕೆಡವಿಬಿಟ್ಟು ಮೂರು ದಿನಗಳಲ್ಲಿ ತಿರುಗಿ ಕಟ್ಟಬಲ್ಲೆನೆಂದು ‘ಈ ಮನುಷ್ಯನು ಹೇಳಿದನು’ ” ಅಂದರು; 62 ಆಗ ಮಹಾಯಾಜಕನು ಎದ್ದು ನಿಂತು, “ನೀನೇನೂ ಉತ್ತರಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಆರೋಪಗಳು ನಿಜವೇನು?” ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು. 63 ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು. 64 ಯೇಸು ಪ್ರತ್ಯುತ್ತರವಾಗಿ, “ನೀನೇ ಹೇಳಿದ್ದೀ; ಆದರೆ ನಾನು ನಿಮಗೆ ಹೇಳುವುದೇನೆಂದರೆ, ಇನ್ನು ಮೇಲೆ[i]ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ, ಆಕಾಶದ ಮೇಘಗಳ ಮೇಲೆ ಕುಳಿತು ಬರುವುದನ್ನೂ ಕಾಣುವಿರಿ” ಅಂದನು. 65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇವನು ದೇವದೂಷಣೆಯ ಮಾತನಾಡಿದ್ದಾನೆ; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ನೋಡಿ ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ; 66 ನಿಮಗೆ ಹೇಗೆ ತೋರುತ್ತದೆ?” ಅನ್ನಲು, “ಇವನು ಮರಣದಂಡನೆಗೆ ಯೋಗ್ಯನು” ಎಂದು ಅವರು ಉತ್ತರಕೊಟ್ಟರು. 67 ಆಗ ಅವರು ಆತನ ಮುಖದ ಮೇಲೆ ಉಗುಳಿ ಆತನನ್ನು ಗುದ್ದಿದರು; ಕೆಲವರು ಆತನ ಕೆನ್ನೆಗೆ ಹೊಡೆದು, 68 “ಕ್ರಿಸ್ತನೇ, ನಿನ್ನನ್ನು ಹೊಡೆದವರಾರು? ನಮಗೆ ಪ್ರವಾದನೆ ಹೇಳು” ಅಂದರು.