1 ಚಕ್ರವರ್ತಿಯಾದ ತಿಬೇರಿಯನು ಆಳ್ವಿಕೆಗೆ ಬಂದ ಹದಿನೈದನೆಯ ವರ್ಷದಲ್ಲಿ, ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ, ಹೆರೋದನು ಗಲಿಲಾಯಕ್ಕೆ ಉಪರಾಜನೂ, ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ, ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ 2 ಅನ್ನನು ಮತ್ತು ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಮರುಭೂಮಿಯಲ್ಲಿ ದೇವರ ವಾಕ್ಯವು ಪ್ರಕಟವಾಯಿತು. 3 ಆತನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ, ನೀವು ಪಾಪ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುತ್ತಿದ್ದನು. 4-6 ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನೆಂದರೆ,
7 ಹೀಗಿರಲಾಗಿ ಯೋಹಾನನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಹೊರಟುಬಂದ ಜನರ ಗುಂಪಿಗೆ, “ಎಲೈ ಸರ್ಪಸಂತತಿಯವರೇ, ಮುಂದೆ ಕಾಣಬರುವ ದೇವರ ಕೋಪದಿಂದ ತಪ್ಪಿಸಿಕೊಳ್ಳುವುದಕ್ಕೆ ನಿಮಗೆ ಎಚ್ಚರಿಕೆಕೊಟ್ಟವರಾರು? 8 ಹಾಗಾದರೆ ಮಾನಸಾಂತರಕ್ಕೆ ಯೋಗ್ಯವಾದ ಫಲಗಳನ್ನು ತೋರಿಸಿರಿ. ‘ಅಬ್ರಹಾಮನು ನಮಗೆ ತಂದೆಯಲ್ಲವೇ’ ಎಂದು ನಿಮ್ಮೊಳಗೆ ಅಂದುಕೊಳ್ಳಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. 9 ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು” ಎಂದು ಹೇಳಿದನು. 10 ಆಗ ಆ ಗುಂಪಿನವರು, “ಹಾಗಾದರೆ ನಾವೇನು ಮಾಡಬೇಕು?” ಎಂದು ಆತನನ್ನು ಕೇಳಿದ್ದಕ್ಕೆ, 11 ಆತನು, “ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ” ಎಂದು ಅವರಿಗೆ ಹೇಳಿದನು. 12 ಸುಂಕ ವಸೂಲಿಗಾರರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು, “ಗುರುವೇ, ನಾವೇನು ಮಾಡಬೇಕು” ಎಂದು ಆತನನ್ನು ಕೇಳಲು, 13 ಆತನು, “ನೇಮಿಸಲ್ಪಟ್ಟಿದ್ದಕ್ಕಿಂತ ಹೆಚ್ಚಾಗಿ ಏನೂ ತೆಗೆದುಕೊಳ್ಳಬೇಡಿರಿ” ಎಂದು ಅವರಿಗೆ ಹೇಳಿದನು. 14 ಸಿಪಾಯಿಗಳು ಸಹ ಬಂದು, “ನಾವು ಏನು ಮಾಡಬೇಕು” ಎಂದು ಆತನನ್ನು ಕೇಳಿದಾಗ ಆತನು ಅವರಿಗೆ, “ಯಾರನ್ನಾದರೂ ಬೆದರಿಸಿ ದುಡ್ಡು ಕಸಿದುಕೊಳ್ಳಬೇಡಿರಿ; ಯಾರ ಮೇಲೆಯೂ ಸುಳ್ಳುದೂರು ಹೇಳಬೇಡಿರಿ. ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ” ಎಂದು ಹೇಳಿದನು.
15 ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರು ನೋಡುವವರಾಗಿದ್ದದರಿಂದ ಅವರೆಲ್ಲರೂ ಯೋಹಾನನ ವಿಷಯವಾಗಿ ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು, 16 ಯೋಹಾನನು ಅವರೆಲ್ಲರಿಗೆ, “ನಾನಂತೂ ನಿಮಗೆ ನೀರಿನ ದೀಕ್ಷಾಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮನಲ್ಲಿಯೂ ಮತ್ತು ಬೆಂಕಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಮಾಡಿಸುವನು. 17 ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ. ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ತುಂಬಿಕೊಳ್ಳುವನು. ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು” ಎಂದು ಉತ್ತರಕೊಟ್ಟನು.
18 ಇನ್ನು ಬೇರೆ ಅನೇಕ ಮಾತುಗಳಿಂದ ಆತನು ಇಸ್ರಾಯೇಲ್ ಜನರಿಗೆ ಬುದ್ಧಿಹೇಳಿ ಶುಭವಾರ್ತೆಯನ್ನು ಸಾರುತ್ತಿದ್ದನು. 19 ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿಮಿತ್ತವಾಗಿಯೂ, ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿಮಿತ್ತವಾಗಿಯೂ ಯೋಹಾನನಿಂದ ಗದರಿಸಲ್ಪಟ್ಟಿದರಿಂದ, 20 ಆತನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಪಟ್ಟಿಯನ್ನು ಇನ್ನೂ ಹೆಚ್ಚಿಸಿಕೊಂಡನು.
21 ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ದೀಕ್ಷಾಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಾಗ ಆಕಾಶವು ತೆರೆಯಲ್ಪಟ್ಟಿತು 22 ಮತ್ತು ಪವಿತ್ರಾತ್ಮನು ದೇಹಾಕಾರನಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ, “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಪರಲೋಕದಿಂದ ಬಂದಿತು.