13 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನೀನು ನರಭಕ್ಷಕನಾಗಿ ನಿನ್ನ ಪ್ರಜೆಗೆ ಪುತ್ರಶೋಕವನ್ನು ಕೊಟ್ಟಿದ್ದೀ” ಎಂದು ನಿನ್ನನ್ನು ಬಯ್ಯುತ್ತಾರೆ. 14 “ಇನ್ನು ಮುಂದೆ ನೀನು ನರಭಕ್ಷಕನಾಗುವುದಿಲ್ಲ, ನಿನ್ನ ಪ್ರಜೆಗೆ ಇನ್ನು ಪುತ್ರಶೋಕವನ್ನು ಕೊಡುವುದಿಲ್ಲ. 15 ಮ್ಲೇಚ್ಛರ ಧಿಕ್ಕಾರವನ್ನು ಇನ್ನು ನಿನ್ನ ಕಿವಿಗೆ ಬೀಳಿಸೆನು; ನೀನು ಜನಾಂಗಗಳಿಂದ ಇನ್ನು ಅವಮಾನವನ್ನು ಅನುಭವಿಸದಿರುವಿ; ನಿನ್ನ ಪ್ರಜೆಯು ಮುಗ್ಗರಿಸುವುದಕ್ಕೆ ಇನ್ನು ನೀನು ಕಾರಣನಾಗುವುದಿಲ್ಲ” ಇದು ಕರ್ತನಾದ ಯೆಹೋವನ ನುಡಿ.
16 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 17 “ನರಪುತ್ರನೇ, ಇಸ್ರಾಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ, ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು; ಅವರ ನಡತೆಯು ಮುಟ್ಟಿನ ಅಶುದ್ಧತ್ವದ ಹಾಗಿತ್ತು. 18 ಅವರು ದೇಶದ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಅಶುದ್ಧಪಡಿಸಿದ ಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿದೆನು. 19 ಜನಾಂಗಗಳೊಳಗೆ ಅವರನ್ನು ಚದರಿಸಿ, ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ, ದುರಾಚಾರಗಳಿಗೆ ಸರಿಯಾಗಿ ನ್ಯಾಯತೀರಿಸಿದೆನು. 20 ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಇವರು ಯೆಹೋವನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದು ಅವರಿಗೆ ಹೇಳಿ, ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡುವರು. 21 ಆದರೆ ಇಸ್ರಾಯೇಲಿನ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು ಮನಮರುಗಿದೆನು.”
22 ಆದಕಾರಣ ನೀನು ಇಸ್ರಾಯೇಲ್ ವಂಶದವರಿಗೆ ಹೀಗೆ ನುಡಿ, ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೇ ಈ ರಕ್ಷಣ ಕಾರ್ಯವನ್ನು ಮಾಡುತ್ತೇನೆ. 23 ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಘನವುಳ್ಳ ನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು; ಹೀಗೆ ನಾನು ಅವುಗಳ ಕಣ್ಣೆದುರಿಗೆ ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು” ಇದು ಕರ್ತನಾದ ಯೆಹೋವನ ನುಡಿ.
24 “ನಾನು ನಿಮ್ಮನ್ನು ಜನಾಂಗಗಳೊಳಗಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ ಸ್ವದೇಶಕ್ಕೆ ಬರಮಾಡುವೆನು. 25 ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಪ್ರೋಕ್ಷಿಸಲು ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ, ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. 26 ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನೂತನ ಸ್ವಭಾವವನ್ನು ಹುಟ್ಟಿಸುವೆನು; ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. 27 ನನ್ನ ಆತ್ಮವನ್ನು ನಿಮ್ಮಲ್ಲಿ ನೆಲಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವಿರಿ. 28 ನಾನು ನಿಮ್ಮ ಪೂರ್ವಿಕರಿಗೆ ಅನುಗ್ರಹಿಸಿದ ದೇಶದಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು. 29 ನಾನು ನಿಮ್ಮನ್ನು ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ರಕ್ಷಿಸಿ, ಬೆಳೆ ಬೆಳೆಯಲೆಂದು ಅಪ್ಪಣೆಕೊಟ್ಟು, ಅದನ್ನು ವೃದ್ಧಿಗೊಳಿಸುವೆನು; ನಿಮಗೆ ಕ್ಷಾಮವನ್ನು ಇನ್ನು ಬರಮಾಡುವುದಿಲ್ಲ. 30 ನೀವು ಕ್ಷಾಮ ದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ, ನಾನು ಮರದ ಹಣ್ಣನ್ನೂ, ಹೊಲದ ಬೆಳೆಯನ್ನೂ ಹೆಚ್ಚಿಸುವೆನು. 31 ಆಗ ನೀವು ನಿಮ್ಮ ದುರ್ಮಾರ್ಗ, ದುರಾಚಾರಗಳನ್ನು ಜ್ಞಾಪಕಕ್ಕೆ ತಂದುಕೊಂಡು, ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.” 32 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಈ ರಕ್ಷಣ ಕಾರ್ಯವನ್ನು ಮಾಡುವುದು ನಿಮ್ಮ ನಿಮಿತ್ತವಲ್ಲ ಎಂಬುದು ನಿಮಗೆ ತಿಳಿದಿರಲಿ; ಇಸ್ರಾಯೇಲ್ ವಂಶದವರೇ, ನಿಮ್ಮ ದುರ್ಮಾರ್ಗಗಳಿಗೆ ಲಜ್ಜೆಗೊಳ್ಳಿರಿ, ನಾಚಿಕೆಪಡಿರಿ.”
33 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನಿಮ್ಮನ್ನು ನಿಮ್ಮ ಅಪರಾಧಗಳಿಂದೆಲ್ಲಾ ಶುದ್ಧಿ ಮಾಡುವ ದಿನದಲ್ಲಿ, ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು, ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವವು. 34 ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ಹಾಳುಬಿದ್ದು ಭೂಮಿಯನ್ನು ಉಳುವರು. 35 ಆಗ ಜನರು, ‘ಹಾಳಾಗಿದ್ದ ಈ ದೇಶವು ಏದೆನ್ ಉದ್ಯಾನದಂತೆ ಕಂಗೊಳಿಸುತ್ತದೆ; ಬಿದ್ದುಹೋಗಿ ಹಾಳಾದ ಪಟ್ಟಣಗಳು ಕೋಟೆಕೊತ್ತಲಗಳಿಂದ ಕೂಡಿ, ಜನಭರಿತವಾಗಿದೆ’ ಎಂದು ಹೇಳುವರು. 36 ಯೆಹೋವನಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವನಾದ ನಾನೇ ನುಡಿದಿದ್ದೇನೆ, ನಾನೇ ಇದನ್ನು ಮಾಡುತ್ತೇನೆ.”
37 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಇನ್ನೊಂದು ವಿಷಯದಲ್ಲಿ ಇಸ್ರಾಯೇಲ್ ವಂಶದವರ ವಿಜ್ಞಾಪನೆಯನ್ನು ಲಾಲಿಸಿ ನೆರವೇರಿಸುವೆನು; ಅಂದರೆ ಅವರ ಜನಸಂಖ್ಯೆಯನ್ನು ಹಿಂಡಿನೋಪಾದಿಯಲ್ಲಿ ಹೆಚ್ಚಿಸುವೆನು. 38 ಮೀಸಲಾದ ಮಂದೆಯಂತೆ, ಹಬ್ಬಗಳಲ್ಲಿ ಯೆರೂಸಲೇಮಿಗೆ ಬಂದು ಸೇರುವ ಹಿಂಡಿನ ಹಾಗೆಯೂ ಇರುವರು. ಆದಕಾರಣ ಮನುಷ್ಯರು ಹಾಳು ಪಟ್ಟಣಗಳಲ್ಲಿ ಹಿಂಡುಹಿಂಡಾಗಿ ತುಂಬಿಕೊಳ್ಳುವರು. ಆಗ ನಾನೇ ಯೆಹೋವನು ಎಂದು ಅವರಿಗೆ ತಿಳಿಯುವುದು.”
<- ಯೆಹೆಜ್ಕೇಲನು 35ಯೆಹೆಜ್ಕೇಲನು 37 ->