19 ಆಗ ಅರಸನು ಗಿತ್ತೀಯನಾದ ಇತ್ತೈ ಎಂಬುವನಿಗೆ, “ನೀನೂ ನಮ್ಮ ಸಂಗಡ ಯಾಕೆ ಬರಬೇಕು? ನೀನು ಸ್ವದೇಶವನ್ನು ಬಿಟ್ಟು ನನ್ನ ಆಶ್ರಯಕ್ಕೆ ಬಂದವನಲ್ಲವೇ. ಹಿಂದಿರುಗಿ ಹೋಗಿ ಅರಸನಾದ ಅಬ್ಷಾಲೋಮನ ಬಳಿಯಲ್ಲಿ ವಾಸಮಾಡು. 20 ನಾನು ಎಲ್ಲೆಲ್ಲಿಯೋ ಅಲೆಯುತ್ತಿರಬೇಕಾಗುವುದು. ಹೀಗಿರುವುದರಿಂದ ನಿನ್ನೆ ಬಂದಂಥ ನಿನ್ನನ್ನು ಕರೆದುಕೊಂಡು ಹೋಗಿ ಸುಮ್ಮನೆ ಏಕೆ ತಿರುಗಾಡಲಿಕ್ಕೆ ಹಚ್ಚಬೇಕು. ನಿನ್ನ ಸಹೋದರರನ್ನು ಕರೆದುಕೊಂಡು ಹಿಂದಿರುಗಿ ಹೋಗು. ಕೃಪಾಸತ್ಯತೆಗಳು ನಿನ್ನ ಸಂಗಡ ಇರಲಿ” ಎಂದು ಹೇಳಿದನು. 21 ಅದಕ್ಕೆ ಇತ್ತೈ, “ಯೆಹೋವನಾಣೆ, ನನ್ನ ಒಡೆಯನಾದ ಅರಸನ ಜೀವದಾಣೆ, ಪ್ರಾಣ ಹೋದರೂ, ಉಳಿದರೂ ನನ್ನ ಒಡೆಯನಾದ ಅರಸನು ಇರುವಲ್ಲೇ ಇರುವೆನು” ಎಂದು ಉತ್ತರಕೊಟ್ಟನು. 22 ಆಗ ದಾವೀದನು ಅವನಿಗೆ, “ಒಳ್ಳೆಯದು, ಮುಂದೆ ನಡೆ” ಎಂದನು. ಗಿತ್ತೀಯನಾದ ಇತ್ತೈಯು ತನ್ನ ಎಲ್ಲಾ ಸೇವಕರನ್ನೂ, ಕುಟುಂಬದವರನ್ನೂ ಕರೆದುಕೊಂಡು ಮುಂದೆ ನಡೆದನು. 23 ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಮುತ್ತಲಿನ ಜನರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯ ಮಾರ್ಗವನ್ನು ಹಿಡಿದರು.
24 ಚಾದೋಕನೂ ಅವನ ವಶದಲ್ಲಿದ್ದ ಎಲ್ಲಾ ಲೇವಿಯರೂ ದೇವರ ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಬಂದು ಅದನ್ನು ಜನರೆಲ್ಲರೂ ದಾಟಿಹೋಗುವವರೆಗೆ ಕೆಳಗಿಳಿಸಿದರು. ಎಬ್ಯಾತಾರನೂ [a]ಯಜ್ಞವನ್ನು ಅರ್ಪಿಸುತ್ತಿದ್ದನು. 25 ಅರಸನು ಚಾದೋಕನಿಗೆ, “ನೀನು ದೇವರ ಒಡಂಬಡಿಕೆಯ ಮಂಜೂಷವನ್ನು ಹಿಂದಿರುಗಿ ತೆಗೆದುಕೊಂಡು ಹೋಗು. ಯೆಹೋವನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದರೆ ನಾನು ಆತನನ್ನೂ, ಆತನ ಆಲಯವನ್ನೂ ನೋಡುವ ಹಾಗೆ ಆತನೇ ನನ್ನನ್ನು ಪುನಃ ಬರಮಾಡುವನು. 26 ಒಂದು ವೇಳೆ ಆತನು ‘ನಿನ್ನಲ್ಲಿ ನನಗೆ ಇಷ್ಟವಿಲ್ಲ’ ಎಂದುಕೊಂಡರೆ ಇಗೋ, ನಾನು ಇಲ್ಲಿದ್ದೇನೆ. ಆತನು ತನಗೆ ಸರಿ ಕಂಡಂತೆ ಮಾಡಲಿ” ಎಂದನು. 27 ಇದಲ್ಲದೆ ಆತನು ಯಾಜಕನಾದ ಚಾದೋಕನಿಗೆ, “ನೀನು ದರ್ಶಿಯಲ್ಲವೇ? ನೀನು ನಿನ್ನ ಮಗನಾದ ಅಹೀಮಾಚನು ಮತ್ತು ಎಬ್ಯಾತಾರನ ಮಗನಾದ ಯೋನಾತಾನರು ಎಂಬ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಸಮಾಧಾನದಿಂದ ಪಟ್ಟಣಕ್ಕೆ ಹಿಂದಿರುಗು. 28 ನಿಮ್ಮಿಂದ ವರ್ತಮಾನ ಬರುವ ತನಕ ನಾನು ಅಡವಿಯಲ್ಲಿ ಹೊಳೆದಾಟುವ ಸ್ಥಳದ ಹತ್ತಿರ ಇರುವೆನು” ಎಂದು ಹೇಳಿದನು. 29 ಆಗ ಚಾದೋಕನೂ ಮತ್ತು ಎಬ್ಯಾತಾರನೂ ದೇವರ ಮಂಜೂಷವನ್ನು ಯೆರೂಸಲೇಮಿಗೆ ತೆಗೆದುಕೊಂಡು ಹೋಗಿ ಅಲ್ಲೇ ವಾಸ ಮಾಡಿದರು.
30 ದಾವೀದನು ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೆಮರದ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಗುಡ್ಡವನ್ನು ಏರಿದರು. 31 ಅಬ್ಷಾಲೋಮನ ಸಂಗಡ ಒಳಸಂಚು ಮಾಡಿದವರಲ್ಲಿ ಅಹೀತೋಫೆಲನೂ ಇದ್ದಾನೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ಅವನು, “ಯೆಹೋವನೇ ಅಹೀತೋಫೆಲನ ಆಲೋಚನೆಗಳನ್ನು ನಿರರ್ಥಕಪಡಿಸು” ಎಂದು ಪ್ರಾರ್ಥಿಸಿದನು. 32 ಅವನು ಗುಡ್ಡದ ತುದಿಯಲ್ಲಿ ದೇವಾರಾಧನೆ ನಡೆಯುವ ಸ್ಥಳಕ್ಕೆ ಬಂದಾಗ ಅರ್ಕಿಯನಾದ ಹೂಷೈ ಎಂಬುವವನು ಅಂಗಿಯನ್ನು ಹರಿದುಕೊಂಡು, ತಲೆಯ ಮೇಲೆ ಮಣ್ಣು ಹಾಕಿಕೊಂಡು, ಅರಸನ ಬಳಿಗೆ ಬಂದನು. 33 ಅರಸನು ಅವನಿಗೆ, “ನೀನು ನನ್ನ ಸಂಗಡ ಬರುವುದಾದರೆ ನನಗೆ ಹೊರೆಯಾಗಿರುವೆ. 34 ಆದರೆ ನೀನು ಹಿಂದಿರುಗಿ ಪಟ್ಟಣಕ್ಕೆ ಹೋಗಿ ಅಬ್ಷಾಲೋಮನಿಗೆ, ಅರಸನೇ, ‘ನಾನು ನಿನ್ನ ಸೇವಕನು; ಈ ಮೊದಲು ನಿನ್ನ ತಂದೆಯ ಸೇವೆ ಮಾಡಿದಂತೆ ಈಗ ನಿನ್ನ ಸೇವೆಯನ್ನು ಮಾಡುತ್ತೇನೆ’ ಎಂದು ಹೇಳುವುದಾದರೆ, ಆಗ ನೀನು ಅಹೀತೋಫೆಲನ ಆಲೋಚನೆಯನ್ನು ನಿರರ್ಥಕಮಾಡುವುದಕ್ಕೆ ನನಗೋಸ್ಕರ ಅನುಕೂಲ ಮಾಡಿಕೊಟ್ಟಂತಾಗುವುದು. 35 ಅಲ್ಲಿ ನಿನ್ನ ಸಂಗಡ ಚಾದೋಕ್ ಮತ್ತು ಎಬ್ಯಾತಾರನೂ ಇರುತ್ತಾರಲ್ಲಾ. ಅರಮನೆಯಲ್ಲಿ ನಿನಗೆ ಗೊತ್ತಾಗುವ ವರ್ತಮಾನವನ್ನೆಲ್ಲ ಆ ಇಬ್ಬರು ಯಾಜಕರಿಗೆ ತಿಳಿಸು. ಅವರ ಬಳಿಯಲ್ಲಿ ಇಬ್ಬರು ಹುಡುಗರಿದ್ದಾರೆ. 36 ಒಬ್ಬನು ಚಾದೋಕನ ಮಗನಾದ ಅಹೀಮಾಚನು ಇನ್ನೊಬ್ಬನು ಎಬ್ಯಾತಾರನ ಮಗನಾದ ಯೋನಾತಾನನು. ಇವರ ಮುಖಾಂತರವಾಗಿ ನೀನು ಎಲ್ಲಾ ವರ್ತಮಾನವನ್ನು ನನಗೆ ಮುಟ್ಟಿಸಬಹುದು” ಎಂದು ಹೇಳಿ ಅವನನ್ನು ಕಳುಹಿಸಿದನು. 37 ಅಬ್ಷಾಲೋಮನು ಯೆರೂಸಲೇಮನ್ನು ಪ್ರವೇಶಿಸುವಷ್ಟರಲ್ಲೇ ದಾವೀದನ ಸ್ನೇಹಿತನಾದ ಹೂಷೈಯು ಯೆರೂಸಲೇಮ್ ಪಟ್ಟಣಕ್ಕೆ ಬಂದನು.
<- 2 ಸಮುವೇಲನು 142 ಸಮುವೇಲನು 16 ->- a ಅಥವಾ ಬೆಟ್ಟನ್ನೇರಿ ಹೋದನು.